Sunday, 4 August 2013

ಭಾಗ ೧

ಇದು ಹವ್ಯಕ ಭಾಷೆಯ ಸಂಭಾಷಣೆಯುಳ್ಳ ಬರಹ. ಹವ್ಯಕ ಪೇಜ್ ನಲ್ಲಿ ಇದನ್ನ ಪೋಸ್ಟ್ ಮಾಡುತ್ತಿದ್ದೇನೆ. ಅಲ್ಲಿ ಹಾಕುವಾಗ ಸಮಯದ ಅಂತರವಿರುವುದರಿಂದ ಒಂದು ಬರಹದಿಂದ ಮತ್ತೊಂದು ಬರಹಕ್ಕೆ ಕೊಂಡಿ ತಪ್ಪಬಹುದು. ಹಾಗಾಗಿ ಆಸಕ್ತರಿಗೆ ಹಿಂದಿನ ಬರಹ ಒಂದೇಸಾರಿ ಸಿಗುವಂತಾಗಲಿ ಎಂಬ ಕಾರಣಕ್ಕೆ ಇಲ್ಲಿ ಎಲ್ಲವನ್ನು ಮುದ್ರಿಸುತ್ತಿದ್ದೇನೆ.


1)


ಕೈಯಲ್ಲಿ ಹಾಲಿನ ಕ್ಯಾನು ಹಿಡಿದುಕೊಂಡು ಡೇರಿಗೆ ಬಂದವಳಲ್ಲಿ ನಿರೀಕ್ಷೆಯಿತ್ತು ಮತ್ತು ಅಷ್ಟೇ ಪ್ರಶ್ನೆಗಳು ಸಹ. ದಿನಾಲೂ ಅವನೂ ಅದೇ ಸಮಯಕ್ಕೆ ಡೇರಿಗೆ ಬರುತ್ತಿದ್ದ. ಮೊದಮೊದಲು ಸಮಯ ಹೆಚ್ಚು ಕಮ್ಮಿ ಆಗುತ್ತಿತ್ತಾದರೂ ಒಬ್ಬರಿಗೊಬ್ಬರು ಅಚಾನಕ್ಕಾಗಿ ಸಿಕ್ಕಿಕೊಂಡಮೇಲಂತು ಡೇರಿಗೆ ಬರುವ ಸಮಯದಲ್ಲಿ ವ್ಯತ್ಯಾಸವಾಗಲಿಲ್ಲ. ಅವಳ ಕಂಗಳಲ್ಲಿಯ ನಿರೀಕ್ಷೆ ಅಸಹನೆಯಾಗಿ ಮಾರ್ಪಡುವ ಮೊದಲೇ ಅವನು ಬಂದುಬಿಟ್ಟ. ಬಂದಕೂಡಲೆ ಮಾತಾಡುವಂತಿಲ್ಲ, ಏಕೆಂದರೆ ಡೇರಿಗೆ ಹಾಲು ತರುವವರು ಇವರಿಬರೇ ಅಲ್ಲವಲ್ಲಾ.. ಹಾಲು ಕೊಟ್ಟು ಕಾರ್ಡಿನಲ್ಲಿ ಎಂಟ್ರಿ ಮಾಡಿಸಿಯೂ ಆದಮೇಲೆ ಹೊರಡುವುದೊಂದೆ ಉಳಿದ ಕೆಲಸವಾದ್ದರಿಂದ ಇಬ್ಬರೂ ಹೊರಟಿದ್ದಾಯಿತು. ಮತ್ತೆ ಮರುದಿನದ ಭೇಟಿಯವರೆಗೆ ಕಾಯಬೇಕಾ ಅಂತ ಯೋಚಿಸ್ಬೇಡಿ.. ಇಬ್ಬರೂ ಹೋಗುವ ದಾರಿ ಒಂದೇ. ಬರುವಾಗಲೂ ಓಟ್ಟಿಗೆ ಬಂದರೆ ನೋಡುವವರಿಗೆ ಅನುಮಾನ ಬರಬಹುದೆಂದು ಅವರಿಬ್ಬರು ಅನವಶ್ಯಕವಾಗಿ ಅಂದುಕೊಂಡಿದ್ದರಿಂದ ಡೇರಿಯಲ್ಲಿ ಅವರಿಬ್ಬರನ್ನ ಬೇರೆಬೇರೆಯಾಗಿ ದರ್ಶನ ಮಾಡಿಸಿದೆ ಅಷ್ಟೆ. ದಾರಿಯಲ್ಲಿ ಸುಮ್ಮನೆ ಹೋಗಲಾದೀತೆ? ಹಾಗೇನೇ ಹೋಗ್ಬೇಕು ಅಂದ್ರೆ ಬರುವಾಗಿನ ತರಹ ಬೇರೆಬೇರೆಯಾಗಿಯೇ ಬರಬಹುದಲ್ಲ. ಡೋಂಟ್ ವರಿ ಅವರಿಬ್ಬರೂ ಮಾತಾಡ್ತಾರೆ.

"ಡೇರಿಗೂ ಚಡ್ಡಿ ಹಾಕ್ಯಂಡೇ ಬತ್ಯಲಾ..?" ಅವಿಳಿಗೆಂತ ಇರಿಸುಮುರುಸು ಗೊತ್ತಿಲ್ಲ, ಆದ್ರೆ ಹಂಗೆ ಕೇಳ್ಬಿಟ್ಳು.
"ಅದೂ ಬ್ಯಾಡದಾಗಿತ್ತು ಅಂಬ್ಯಾ?" ಅವನು ಹೀಗೆ ಕೇಳಿದ್ದರಲ್ಲಿ ತಪ್ಪೇನಿಲ್ಲ ಬಿಡಿ.
"ಥು ಹೊಗಾ.. ಸಾಯ್ಲಿ ಚೊಲೊ ಆದ್ರು ಇದ್ದ, ಅದೂ ಇಲ್ಲೆ. ಗಲೀಜು" ಹೇಳಿಕೇಳಿ ಹೆಣ್ಮಕ್ಳು ಒಮ್ಮೆ ಹೇಳಿದ್ಮೇಲೆ ಮೊದ್ಲು ಹೇಳಿದ್ದಕ್ಕೆ ಸಬೂಬು ನೀಡೋದು ಅವರ ಧರ್ಮ.
"ನಿಂಗೆತ ಆತೆ ಹಾಕ್ಯಂಡಿದ್ ಯಂದೆಯ" ನಿಂದೇನಲ್ಲಬಿಡು ಅನ್ನೋ ದಾಟೀಲೇ ಹೇಳಿದ್ದ.
"ಎಂತು ಇವತ್ತು ಖಡಕ್ ಮಾತುಕತೆ" ಸೋಲುತ್ತಿದ್ದೇನೆ ಅಂತ ಅನಿಸಿದ್ಮೇಲೆ ಹುಡ್ಗೀರು ವಿಷ್ಯ ಬದ್ಲಾಯಿಸ್ತಾರೆ ಅನ್ನೋದ್ ಹೊಸಾ ಗಾದೆ ಅಂತು ಅಲ್ಲ.

"ಡೇರಿ ಗೋವಿಂದನತ್ರ ಹಲ್ ಕಿರಿತಿದ್ದಿದ್ದೆ" ಪಾಪ ಪೊಸೆಸ್ಸಿವ್ನೆಸ್ಸು. ಹಂಗಂತ ಅವಳು ಅವನ ಲವ್ವರೇನಲ್ಲ.
"ಅಯ್ಯ ಅದ್ರಲ್ಲೆಂತಾ.. ಅವ ನಗಾಡ್ಜಾ ಆನು ನಗಾಡ್ಜಿ." ಅವಳು ನಕ್ಕಿದ್ದು ಅಷ್ಟಕ್ಕೇ ಆಗಿತ್ತು.
" ಹಾಲ್ ಅಳತೆ ಮಾಡ ಕೆರ್ದೇವಿನೂ ಯನ್ನತ್ರೆ ನಗಾಡ್ತು ಆದ್ರೆ ಆನು ಹಂಗೇ ಹಲ್ ಕಿರಿತ್ನ?" ಈ ಬಾರಿ ಸಬೂಬು ನೀಡುವ ಸರದಿ ಅವನದ್ದಾಗಿತ್ತು.
"ಅದು ನಿನ್ ನೋಡ್ಕೆಂಡ್ ನಗಾಡ್ತು ಅಂದ್ಕಂಜ್ಯ ಮಂಗ್ಯಾ? ನೀ ಜಿಪ್ ಹಾಕ್ಯ ಬಂಜಿಲ್ಲೆ ಅದ್ಕೆ ನಗಾಡಿದ್ದು. ದೇವ್ರೆ ಅದ್ಕೂ ಕಂಡೋತಲೊ" ಕಾಲೆಳೆಯುವ ಸಂದರ್ಭ ಬಂದ್ರೆ ಹುಡ್ಗೀರು ಹುಡುಗರ ಮರ್ಯಾದೆಯನ್ನು ಸಲೀಸಾಗಿ ತಗೋತಾರೆ ಅನ್ನೋದು ನೀತಿ.
ಥಟ್ಟನೆ ಜಿಪ್ ಎಳೆದುಕೊಂಡನಾದರೂ ಅವಮಾನ ಬೆತ್ತಲಾಗೇ ಇತ್ತು. ಸ್ವಲ್ಪ ಹೊತ್ತು ಮಾತಿರಲಿಲ್ಲ. ಏನಂತ ಮಾತಾಡ್ತಾರೆ ಹೇಳಿ. ಅವಳು ಮಾತಾಡಿದ್ರೆ ಇವನ ಮುಜುಗರ ಹೆಚ್ಚಾಗತ್ತೆ. ಇವನು ವಿಷಯ ಬದ್ಲಾಯ್ಸಿದ್ರೆ ಮ್ಯಾಚು ಸೋತ್ಮೇಲೆ ಅಂಪೈರ್ ಸರಿ ಇಲ್ಲ ಅಂದಂಗಿರತ್ತೆ. ಸೊ ಇಬ್ರೂ ಸೈಲೆಂಟಾಗಿ ಸ್ವಲ್ಪ ದೂರ ಹೆಜ್ಜೆ ಹಾಕಿದ್ರು. ಆದ್ರು ಅವ್ಳಿಗೆ ನಗು ಬರ್ತಾನೇ ಇತ್ತು.
ಹೆಣ್ಣುಮಕ್ಳಿಗೆ ಉರ್ಸೋಕು ಗೊತ್ತು, ಸವ್ರೋಕು ಗೊತ್ತು. ಅದ್ಕೆ ಅವ್ಳೇ ಮಾತಾಡಿದಳು.
"ಕಾಲೇಜಿಗೆಂತಕ್ ಬಂಜಿಲ್ಲೆ ಇವತ್ತು?" ಅಂದಳು.
ವಿಷ್ಯ ಬದ್ಲಾಯ್ಸಿದ್ ರೀತೀಲಿ ಕೊಂಕಿದ್ದಂತೆ ಅವನಿಗೆ ಕಾಣಿಸಲಿಲ್ಲ. 
" ಏನಾರು ವಿಷೇಶ ಇತ್ತ?" ಬರದೇ ಇರೋದರಿಂದ ನಷ್ಟ ಎಷ್ಟು ಅಂತ ಹುಡುಗರು ವಿಚಾರ ಮಾಡ್ತಾರ್ಯೆ ಹೊರತು ಬರಲಾರದಂತೆ ಮಾಡಿದ ಕಾರಣವನ್ನ ಮರುಕಳಿಸದಂತೆ ನೋಡಿಕೊಳ್ಳುವ ಬಗ್ಗೆಯಲ್ಲ.
" ಹೌದು... ನಗರಾಜನ್ನ ಗೊತ್ತಿದ್ದ?" ನಿರುತ್ತರವನ್ನ ನಿರೀಕ್ಷಿಸಿದವಳಾಗಿ ಮತ್ತೆ ಶುರುಮಾಡಿದಳು "ನಿಮ್ಮನೆ ಕವ್ವನ ಅಜ್ಜನ್ ಮನೆ ಭಾವನ ಷಡ್ಕನ್ ಎರಡನೆ ಮಗ" ಸಂಬಂಧದ ವಂಶವೃಕ್ಷ ವಿವರಿಸೋದರಲ್ಲಿ ಹೆಣ್ನುಮಕ್ಕಳಿಗೆ ಸಾಟಿಯಿಲ್ಲ ಬಿಡಿ. ಅವನಿಗೂ ಅದೇ ಅನಿಸ್ತೇನೊ ಅದಕ್ಕೆ ಹೀಗಂದ.
"ಅವ ಯಾರಾದ್ರೆ ಯಂಗೆಂತೆ ವಿಷ್ಯ ಹೇಳು ಮಾರಾಯ್ತಿ." 
" ಪೆಂಗಿದ್ದಂಗಿದ್ದ. ಗುಲಾಬಿ ಹೂ ತಗ ಬಂದಿದ್ದ. ಪ್ರಪೋಸ್ ಮಾಡವಾಗಿದ್ನಡಾ.. ಪಕ್ಕಯಾ ಮಾರಯಾ ಒಂದ್ ಹತ್ತುಸಾರಿ ಕ್ಲಾಸತ್ರೆ ಬಂದಿದ್ನನ.. ಕಡಿಗೂ ಹೇಳಿದ್ನೇ ಇಲ್ಲೆ ಮಾರಾಯಾ" ಅವಳ ದನಿಯಲ್ಲಿ ಮೊದಲ ಒಲವ ಪುಳಕದ ನೆರಳಿತ್ತು.
"ಹೇಳಿದ್ರೆ ನೀ ಎಂತ ಹೇಳ್ತಿದ್ದೆ?" ನೇರವಾಗಿ ಕೇಳಿದ.
ಅವನಿಂದ ಆಶ್ಚರ್ಯ ಅಪೇಕ್ಷಿಸಿದ್ದಳೇ ಹೊರತು ಪ್ರಶ್ನೆಯನ್ನಾಗಿರಲಿಲ್ಲ. ಸ್ವಲ್ಪ ತಡವರಿಸಿದರೂ ಸುಧಾರಿಸಿಕೊಂಡು ಹೇಳಿದಳು.
"ಎಂತ ಕೇಳಿದ್ಕೂಡ್ಲೆ ಹೇಳ್ಬುಡಲಾಗ್ತಾ?" ಹೆಣ್ಣು ಮಕ್ಳು ಈ ವಿಷ್ಯದಲ್ಲಿ ಕಾಯ್ಸಿದ್ರೇ ಚಂದ.
ಅವನಿಗೆ ಸ್ವಲ್ಪ ಸಮಾಧಾನವಾಯ್ತು. 
"ಆದ್ರೂ ಏನೊ ಖುಷಿ ಆದಂಗಿದ್ದು ತಮ್ಗೆ" ಪಾಪ, ಅವಳ ಅನಿಸಿಕೆಯನ್ನ ಅರ್ಥಮಾಡಿಕೊಳ್ಳುವ ಅನಿವಾರ್ಯತೆಯಿತ್ತವನಿಗೆ.
"ಸುಮ್ನಿರಾ ಖುಷಿ ಎಂತು ಇಲ್ಲೆ. ಅಷ್ಟೆಲ್ಲಾ ಹೆದ್ರದೆಂತಕ್ಕೆ? ಹೇಳವು ಅಂದ್ರೆ ಹೇಳ್ಬಿಡವು."
"ನಿಂಗ ಅಕ್ಕು ಹೇಳ್ತಿ ಹೇಳದ್ ಖಾತ್ರಿ ಇದ್ರೆ ಹೆದರ್ದೆ ಹೇಳ್ತ ಹುಡುಗರು" ತಾನು ಗಂಡು ಜನ್ಮದ ರಾಯಭಾರಿಯೇನೊ ಅನ್ನೋ ಮಟ್ಟದಲ್ಲಿ ಹೇಳಿದ. 
"ನೋಡಪಾ, ಯಂಗ ಹೇಳದ್ ಹೇಳ್ಯೇ ಹೇಳ್ತ್ಯ. ಅದು ನಿಂಗಕ್ ಬೇಕಾಗಿದ್ದೇ ಆಗವು ಹೇಳೇನ್ ಎಲ್ಲು ಇಲ್ಲೆ. ಅದ್ರಲ್ಲೂ ಫಸ್ಟ್ ಪ್ರಪೋಸಲ್ನೇ ಒಪ್ಗೆಂಡ್ರೆ ಕಡಿಗ್ ಬೇರೆ ಆಫರೇ ಬತ್ತಿಲ್ಲೆ.ಅದ್ಕೆ ಸ್ವಲ್ಪ ಯೋಚ್ನೆ ಮಡ್ತ್ಯ." ಪ್ರೇಮ ಭಗವದ್ಗೀತೆಯನ್ನ ಸರಳೀಕ್ರತವಾಗಿ ರಾಧೆ ದ್ರೌಪತಿಗೆ ಉಪದೇಶ ಮಾಡಿದಂಗಿತ್ತು ಆ ಸಂದರ್ಭ. 
"ಅಂಗರ್ ಹುಡುಗ್ರು ಫಸ್ಟ್ ಟೈಮ್ ಯಾವ್ದಾರು ಸ್ಕ್ರಾಪ್ ಫಿಗರ್ ಗೆ ಪ್ರಪೋಸ್ ಮಾಡವು ಕುಶಾಲಿಗೆ ಹೇಳಾತು" ಗಲ್ಲಿ ಕ್ರಿಕೆಟ್ ನಲ್ಲಿ ಉಪ್ಯೋಗಕಿಲ್ಲದ ಪುಕ್ಕಟೆ ಟ್ರಯಲ್ ಬಾಲ್ ಇರತ್ತಲ್ಲ, ಅದೇ ರೀತಿ ಇದೂನು ಅನ್ನೋ ರೀತಿಲ್ ಹೇಳಿದ.
" ಹೊ ಒಂದ್ ಮಟ್ಟಿಗೆ ಅದು ಚೊಲೊನೇಯ" ಪರವಾಗಿಲ್ಲ ಅನ್ನೋದು ಅವಳ ಭಾವನೆಯಾಗಿತ್ತು.
"ಹಾಗಿದ್ರೆ ನಾಗರಾಜನೂ ಅದೇ ಪ್ರಯತ್ನದಲ್ಲಿದ್ದಿದ್ನ ಎಂತನ".. ಹೋದ ಮಾನ ವಾಪಸ್ಸು ಬಂದಂಗಿತ್ತು ಅವನ ದನಿಯಲ್ಲಾದ ಬದಲಾವಣೆಯಲ್ಲಿ. 
"ಹೊಟ್ಟೆ ಉರಿ ನಿಂಗೆ" ಇಷ್ಟೊತ್ತು ಅವನಿಗಾಗುತ್ತಿರುವುದನ್ನೇ ಅವಳು ಹೇಳಿದರೂ ಅವಳ ದನಿಯಲ್ಲಿದ್ದ ಅರ್ಥ ಅದಾಗಿರಲಿಲ್ಲ. ಅವನೇನೋ ಹೇಳಬೇಕೆನ್ನುವಷ್ಟರಲ್ಲಿ ಅವರವರ ಊರಿನ ಕವಲು ದಾರಿ ಎದುರಾಗಿತ್ತು.. ದೈನಂದಿನ ರುಟೀನಿನಂತೆ ಕವಲು ಹಾದಿ ಬಂತೆಂದರೆ ಅಲ್ಲಿ ಹೆಚ್ಚು ಹೊತ್ತು ನಿಲ್ಲದೆ ಹೊರಟುಬಿಡಬೇಕು. ಇಬ್ಬರೂ ತಮ್ಮ ತಮ್ಮ ದಾರಿ ಹಿಡಿದರು. 
"ಸುಮಾರ್ ಸುದ್ದಿ ಇದ್ದು ವಿಜು.. ನಾಳೆ ಮಾತಾಡನ" ಹೆಣ್ಣು ಮಕ್ಕಳಿಗೆ ವ್ಯಕ್ತಿ, ವಿಷಯಕ್ಕಿಂತ ಸಮಯ ಸಂದರ್ಭ ಎರಡೂ ಮುಖ್ಯ ಅಂತ ಅವನಿಗನಿಸಿತು. ಅವಳು ತಿರುವಲ್ಲಿ ಮರೆಯಾಗುತ್ತಿದ್ದಳು. ಅವನ ಕಾಲುಗಳು ಯಾರ ಅನುಮತಿಯನ್ನೂ ಕೇಳದೆ ಮನೆಯತ್ತ ಹೆಜ್ಜೆ ಹಾಕಿದ್ದವು. ಬೆನ್ನ ಹಿಂದೆ ಅಂಗಿಯೊಳಗೆ ಇಟ್ಟುಕೊಂಡಿದ್ದ ಗುಲಾಬಿ ಹೂ, ಅವನಲ್ಲಿಯೇ ಉಳಿದಿತ್ತು. ಖಾಲಿಯಾದ ಹಾಲಿನ ಕ್ಯಾನು ಸುಮ್ಮನೆ ಸದ್ದು ಮಾಡುತ್ತಿತ್ತು.

ಕಥೆ ಶುರು ಮಾಡಿದ್ದು ನಾನು. ಮುಗಿಸೋದು ನಾನೇ ತಾನೆ.. ಕವಲು ದಾರಿ ಬಂತು ಅಂತ ಮನೆಗ್ ಹೋಗ್ಬಿಟ್ರೆ ಆಗೋಯ್ತಾ? ದನ ಮರುದಿನವೂ ಹಾಲು ಕೊಡಲ್ವಾ? ಡೇರಿ ಮುಚ್ಚಿಹೋಗತ್ತಾ? ನಾಳೆ ಮತ್ತೆ ಬರ್ತಾರೆ ಅದೇ ಕ್ಯಾನ್ ಹಿಡ್ಕೊಂಡು. ಮತ್ತೆ ಮಾತಾಡ್ಸಿದ್ರಾಯ್ತು ಬಿಡಿ. 

ಸಂಭಾಷಣೆ ಸಷೇಶ.

Wednesday, 9 January 2013




ನನ್ನದೆಂಬ ಈ ಹಿಡಿಜೀವನದಲ್ಲಿ
ಕೆವಲ ಆಕರ್ಷಣೆಯ ಬದಲಾಗಿ
ಒಲವು ಮೂಡುವುದು
ಅಸಾಧ್ಯವೆಂದುಕೊಂಡಿದ್ದೆ

ಅವಳು ಕಾಣುವವರೆಗೂ..






ಬದುಕಿನಲ್ಲಿ ಹಿಂದೆಂದೂ ಇಂಥ
ಮೃದುಲ ಮೆತ್ತನೆ ಹಿತವಾದ
ಆನಂದವಾಗಿರಲಿಲ್ಲ.
ಹಾಗಾಗಿದ್ದು 
ನನ್ನೆರಡೂ ಬೊಗಸೆಗಳಲಿ 
ಅವಳ ಅಂಗಾಲ ಹಿಡಿದಾಗ....



ನನ್ನ ಅಬ್ಬೇಪಾರಿಯಂತ ಬದುಕಿಗೆ
ಏನೋ ಒಂದು ಬದಲಾವಣೆ ಬೇಕಿತ್ತೇನೊ..

ಅವಳು ಬಂದಳು....

ನಿದ್ದೆ ಸರಿಯಾಗದೆ ಮಗ್ಗುಲ ಬದಲಿಸುತ್ತ...


ಹೇಳಿಕೊಳ್ಳುವಂತದ್ದಲ್ಲದಿದ್ದರೂ, ಇದೂ ಒಂದು ಕಾರಣವಾದ್ದರಿಂದ ಹೇಳುತ್ತಿದ್ದೇನೆ. ಭಂ ಬೋಲೆಯನ್ನ ಮುಗಿಯುವವರೆಗೆ ಬರೆಯುತ್ತೇನೆಂಬ ಹುಮ್ಮಸ್ಸಿನಲ್ಲಿ ಶುರುಮಾಡಿದ್ದೇನೋ ನಿಜ. ಆದರೆ ಕೆಲಸದ ಹಾಗು ಬಿಡುವಿಲ್ಲದ ಕೆಲವು ಅನಿವಾರ್ಯ ಬದ್ಧತೆಗೆ ನನ್ನನ್ನೊಪ್ಪಿಸಿಕೊಂಡಿದ್ದರಿಂದ ಶುರುಮಾಡಿದ್ದನ್ನ ಮುಗಿಸಲಾಗಲಿಲ್ಲ. ಹಾಗಂತ ಇಲ್ಲಿಗೇ ಇದನ್ನ ಬಿಡುವುದಿಲ್ಲ. ಅಪರೂಪಕ್ಕೆ ಒಂದು ಭಾಗವನ್ನ ಪೋಸ್ಟ್ ಮಾಡುವುದರಿಂದ ಓದಲು ರಗಳೆಯಾಗುತ್ತದೆ ಎಂಬ ಕಾಳಜಿಯಿಂದ ತಾತ್ಕಾಲಿಕವಾಗಿ ನಿಲ್ಲಿಸುತ್ತಿದ್ದೇನೆ. ಭಂ ಬೋಲೆಯನ್ನ ಅದರಷ್ಟಕ್ಕದು ಹಾಳೆಯ ಮೇಲೆ ಸಮಯ ಸಿಕ್ಕಾಗೆಲ್ಲ ಬರೆದುಕೊಳ್ಳುತ್ತೇನೆ. ಅದು ಒಂದು ಹಂತಕ್ಕೆ ಸಮಾಧಾನವಾಗುವಷ್ಟು ಬರೆದಮೇಲೆ ಮತ್ತೆ ಪೋಸ್ಟ್ ಮಾಡುವ ಸಾಹಸಮಾಡುತ್ತೇನೆ. ಬರೆದ ಎಷ್ಟೋ ಬರಹಗಳು ಮೂಲೆ ಸೇರಿಕೊಂಡಿವೆ. ಅವುಗಳನ್ನ ಜೀರ್ಣೋದ್ಧಾರ ಮಾಡುವುದೂ ಒಂದು ಮುಖ್ಯ ಕೆಲಸವಾಗುವುದರಿಂದ ಭಂಬೋಲೆಗೆ ಬ್ಲಾಗಿನಿಂದ ಸದ್ಯಕ್ಕೆ ಮುಕ್ತಿ ಕೊಡುತ್ತಿದ್ದೇನೆ. ಭಂ ಬೋಲೆಗೆ ಬೆನ್ನುತಟ್ಟಿದ ಎಲ್ಲರ ಕ್ಷಮೆಯಿರಲಿ. 

ದಿನಸಿಬರಹಗಳಿಗೂ ನಿಮ್ಮ ಕೃಪೆಯಿರುತ್ತದೆಂದು ಬಯಸುತ್ತ ಹೊಸಹೆಜ್ಜೆಯಿಡುತ್ತಿದ್ದೇನೆ. 
Confusion is Happiness.

Friday, 14 December 2012

ಭಂಬೋಲೇ.. ಆರಂಭ


ಆರಂಭ..

ಕಾಲುಗಳು ಇಬ್ಬರನ್ನ ಹೊತ್ತು ನಡೆದಂತೆ ಆಯಾಸಗೊಂಡಿದ್ದವು. ಹೆಜ್ಜೆ ಕಿತ್ತಿಡಲು ಮನಸಿದ್ದರೂ, ಹಾಗೂ ಹೀಗೂ ಹುಡುಕಿಕೊಂಡ ಮಾರ್ಗವಿದ್ದರೂ, ನಡೆದು ಈಗಿರುವ ಪರಿಸ್ಥಿತಿಗಿಂತ ಸುಸ್ಥಿತಿಗೆ ಸೇರಲು ಶಕ್ತಿಯಿರಲಿಲ್ಲ. ಕಾಡು ಕತ್ತಲಾದಂತೆ ಸ್ವಭಾವಿಕವಾಗಿ ಅಪರಿಚಿತ ಲೋಕವೊಂದನ್ನ ಸೃಷ್ಟಿಸುತ್ತಿದೆಯೆಂಬ ಆತಂಕಬೇರೆ ಮನಸನ್ನ ಆವರಿಸುತ್ತಿತ್ತು. ಇಡೀ ಕಾಡಿನಲ್ಲಿ ಯಾವುದೋ ಮೂಲೆಯಲ್ಲಿ ಯಕ್ಕಶ್ಚಿತ್ ಜೀವವೊಂದು ಸರಿದಾಡಿದಂತೆ ರಾಮಾಜಿ, ತರಗೆಲೆಗಳ ರಾಷಿಯಲ್ಲಿ ತೆವಳುತ್ತ ಸಾಗುತ್ತಿದ್ದ. ತಾನು ಆ ಜಾಗಕ್ಕೆ ಬಂದಿದ್ದೇನಕ್ಕೆಂಬ ಇತಿಹಾಸ ಅವನ ನೆನಪಿನಲ್ಲಿರಲಿಲ್ಲ. ಎಲ್ಲೊ ಅಲ್ಲಲ್ಲಿ ಯಾವ್ಯಾವುದೋ ಸಂದರ್ಭಗಳನ್ನ ನೆನಪಿಸುವ ಆಸ್ಪಷ್ಟ ಚಿತ್ರಗಳು. ಎಲ್ಲಿಗೆ ಹೋಗಬೇಕೆಂಬ ಗುರಿಯೂ ಇರದ ಕಾರಣ, ಕಾಡಿನ ದಟ್ಟತೆ ಕಡಿಮೆಯಿರುವ ಜಾಗವನ್ನ ಸೇರುವುದೇ ಸದ್ಯದ ಗುರಿಯೆಂದು ರಾಮಾಜಿ ಹೊರಳಾಡಿದ.
ಇರುಳು ಆವರಿಸಿದಂತೆ, ಭೀತಿಯೂ ಉಚಿತವಾಗಿ ಎದೆಗಿಳಿಯುತ್ತದೆಂಬ ಸತ್ಯ ರಾಮಾಜಿಗೆ ಗೊತ್ತಿತ್ತು. ಅದಷ್ಟುಬೇಗ ಸುರಕ್ಷಿತ ಪ್ರದೇಶವೊಂದನ್ನ ತಲುಪುವುದು ಅನಿವಾರ್ಯವಾಗಿತ್ತವನಿಗೆ. ಕೊರೆಯುವ ಚಳಿ, ಸಣ್ಣಗೆ ಒಂದೇಸಮನೆ ಬೀಸುವ ಗಾಳಿ, ಅಪರಿಚಿತ ಸದ್ದು, ಅನಾಮಿಕ ಜೀವಿಗಳ ಕೂಗು ಕೆಲವು ಪರಿಚಿತವೆನಿಸುವ ಚೀತ್ಕಾರಗಳು. ತನ್ನ ವಿಧಿಯನ್ನ ತಾನೇ ಶಪಿಸಿಕೊಂಡ. ಆದರೆ ಅದರಿಂದ ಯಾವ ಲಾಭವೂ ಇರಲಿಲ್ಲ. ಆಗಿದ್ದಾಗಿದೆಯೆಂದು ತೆವಳುವುದೊಂದೇ ಉಳಿದ ಮಾರ್ಗವಾಗಿತ್ತು. ಹೇಗೋ ಸಾಹಸಮಾಡಿ ಎದ್ದುನಿಂತು ನಡೆದುಬಿಡುವುದೆಂದು ತೀರ್ಮಾನಿಸಿದ. ಎದ್ದುನಿಲ್ಲಲು ಗಾಯದಲ್ಲಿ ಜಜ್ಜಿದ್ದ ಮಂಡಿ ಸಹಕರಿಸಲಿಲ್ಲ. ಪಾದಗಳಲ್ಲಿ ತೊನೆಯುತ್ತಿದ್ದ ರಕ್ತ ಕಮಟುತ್ತಿತ್ತು. ಕಾಲ್ಗಂಟು ಊದಿತ್ತು. ತೆವಳುತ್ತಲೇ ಸಾಗಿದರೆ ಯವಾಗಬೇಕಾದರೂ ಅನಾಯಾಸವಾಗಿ ಕಾಡು ಪ್ರಾಣಿಗೆ ಆಹಾರವಾಗುವ ಅವಕಾಶವಿದ್ದಿದ್ದರಿಂದ  ಸಧ್ಯವಾದಷ್ಟು ನಡೆದುಬಿಡುವುದೇ ಸರಿಯೆಂದನಿಸಿತು ರಾಮಾಜಿಗೆ. ಸುತ್ತಲಿದ್ದ ಪೊದೆಗಳನ್ನ ಆಧಾರವಾಗಿಸಿಕೊಂಡು ಹೇಗೋ ಎದ್ದು ನಿಂತ. ನಿಂತಷ್ಟೇ ಬೇಗ ಮತ್ತೆ ಬಿದ್ದ. ರಾಮಾಜಿಗೆ ಹೇಳಹೆಸರಿಲ್ಲದಂತೆ ಸಾಯುವುದು ಇಷ್ಟವಿರಲಿಲ್ಲ. ಶರಿರ ಸಣ್ಣಗೆ, ಮಿತವಾದ ಎತ್ತರದಲ್ಲಿ ಪೀಚಾಗಿದ್ದರೂ ರಾಮಾಜಿ ಮಾನಸಿಕವಾಗಿ ಬಹಳ ಗಟ್ಟಿಗ. ಯಾವುದನ್ನೂ ಅಷ್ಟು ಸುಲಭಕ್ಕೆ ಸೋತವನಲ್ಲ. ಹಾಗೆ ತಾನು ದಾರುಣ ಪರಿಸ್ಥಿಯಲ್ಲಿದ್ದರೂ ಅದನ್ನ ಬದಿಗೊತ್ತಿ ಗೊತ್ತಿರದ ಗುರಿಯತ್ತ ಸಾಗಲು ಇಷ್ಟು ಹಠ ಮಾಡುತ್ತಿರುವುದಾದರೂ ಯಾಕೆಂಬುದು ಅರಿವಾಗಲು ರಾಮಾಜಿಗೆ ಹಳೆಯದು ನೆನಪಾಗಲಿಲ್ಲ. ಮತ್ತೆ ಹೇಗೋ ಎದ್ದುನಿಂತು, ಮತ್ತದೇ ಪೊದೆಗಳನ್ನ ಬಳಸಿಕೊಂಡು ಅರೆಜೀರ್ಣ ಶರೀರವನ್ನ ಸಾಧ್ಯವಾದಷ್ಟು ಮುಂದೂಡಿದ. ಅನಿವಾರ್ಯತೆಗಳು ಅರಿವಾಗದ ಕೆಲವು ಶಕ್ತಿಗಳನ್ನ ಎಚ್ಚೆಬ್ಬಿಸುತ್ತವೆಂಬ ಹೊಸ ಸತ್ಯ ರಾಮಾಜಿಗೆ ಅರಿವಾಗಿದ್ದೇ ಆಗ. ಧೂಮದಲ್ಲಿ, ಇಬ್ಬನಿಯ ಮಂಜು ಆವರಿಸಿದ್ದರಿಂದ ಮುಂದಿರುವುದೆಲ್ಲ ಹತ್ತಿರ ಬಂದಂತೂ, ಏನೆಂದು ತಿಳಿಯುತ್ತಿರಲಿಲ್ಲ. ಕುಂಟುತ್ತಲೇ ರಾಮಾಜಿ ಫರ್ಲಾಂಗು ದೂರ ಕ್ರಮಿಸಿಬಿಟ್ಟ. ನೋವಿಗೂ ಶರೀರ ಹೊಂದಿಕೊಂಡು ಮತ್ತಷ್ಟು ದೂರ ನಡೆಯಲು ಅನುಮತಿ ನೀಡಿತೆಂಬಂತೆ ತರಗೆಲೆಗಳನ್ನ ಗಿಡಗಂಟಿಗಳನ್ನ ಬಾಚುತ್ತ ಮುಂದುವರಿದ. ಇಬ್ಬನಿಯ ಮಂಜು ವಿಚಿತ್ರವಾದ ಪರಿಮಳವನ್ನ ಸೂಸುತ್ತಿತ್ತು. ತನಗೆ ಎಚ್ಚರವಾದಾಗಿನಿಂದ ಆ ಕಾಡಿನಲ್ಲಿ ಅಂತಹದೇ ಒಂದು ಸುವಾಸನೆ. ರಾತ್ರಿಯಲ್ಲಿ ಹೂಬಿರಿದು ಹಾಗಾಗಿರಬಹುದೆಂಬ ಅನುಮಾನ ಅವನಿಗೆ ಸರಿಯೆನಿಸಿರಲಿಲ್ಲವಾದರೂ ಅದರೆಡೆಗೆ ಹೆಚ್ಚು ಗಮನಕೊಟ್ಟಿರಲಿಲ್ಲ. ಅದೇ ಸುವಾಸನೆ ತಾನು ಮುಂದುವರಿದಂತೆ ಹೆಚ್ಚುತ್ತಹೋಯಿತು. ರಾಮಾಜಿ ಅದರಿಂದ ಅನಾಹುತವನ್ನು ಊಹಿಸಿದರೂ ಸುವಾಸನೆಯಿಂದ ಗಂಭೀರ ಪರಿಣಾಮಗಳಾಗುವುದು ಸುಲಭಕ್ಕೆ ಸಾಧ್ಯವಿರಲಿಲ್ಲ. ಆದರೆ ಆ ಸುವಾಸನೆಯ ಮೂಲದ ಬಗ್ಗೆ ರಾಮಾಜಿಗೆ ಕುತೂಹಲ ಶುರುವಾಯ್ತು. ಆ ಕುತೂಹಲದಲ್ಲಿಯೇ ತನಗೇ ಅರಿವಿಲ್ಲದಂತೆ ರಾಮಾಜಿ ಸುಮಾರು ದೂರ ನಡೆದುಬಂದಿದ್ದ. ದೂರದಲ್ಲೆಲ್ಲೋ ಬೆಳಕಿನ ಪ್ರಭೆಯೊಂದು ಕಾಣಿಸಿದಂತಾಯ್ತು. ಮತ್ತೊಂದು ಜೀವದ ಸುಳಿವೇ ಇಲ್ಲದ ಆ ಭೀಕರ ಕಾಡಿನಲ್ಲಿ ಬೆಳಕು ಕಾಣಿಸಿದ್ದು ಒಳ್ಳೆಯದೋ ಅಥವಾ ಮತ್ತಿನ್ನೇನೋ ಎಂಬ ಅನುಮಾನವೂ ಅವನನ್ನ ಹೊಕ್ಕಿತು. ಅವಸರಮಾಡದೆ ಆ ಬೆಳಕಿನ ಜಾಡನ್ನ ಹಿಡಿದು ಸಾಧ್ಯವಾದಷ್ಟು ಸದ್ದು ಮಾಡದೆ ತೆವಳಿಕೊಂಡು ಅದರೆಡೆಗೆ ನಡೆದ. ನಾಲ್ಕು ಸೂಡಿಹಿಡಿದು ಜಟಾಧಾರಿ ಬಾಬಗಳು ನಿಂತಿದ್ದರು. ಅಪಾಯವಾಗದಷ್ಟು ದೂರದಲ್ಲಿ, ತನ್ನ ಇರುವಿಕೆ ಆ ಬಾಬಾಗಳಿಗೆ ಅರಿವಾಗದಂತೆ ಮರದ ಬೊಡ್ಡೆಯಲ್ಲಿ ತನ್ನನ್ನ ತಾನು ಹುದುಗಿಸಿಕೋಂಡ. 
ಕಾವಿ ಲಂಗೋಟಿಯಲ್ಲಿ, ಮೈತುಂಬ ಭಸ್ಮಮೆತ್ತಿಕೊಂಡು ಜಡೆಹೊತ್ತ ಬಾಬಾಗಳು ಸೂಡಿಹಿಡಿದುಕೊಂಡು, ಸುಮ್ಮನೆ ನಿಂತಿದ್ದರು. ಅವರ ಎದುರಲ್ಲಿ ಶರೀರವೊಂದು ಮಲಗಿತ್ತು. ಕೆಲಹೊತ್ತು ಅಲ್ಲಿ ಯಾವ ಚಲನೆಯೂ ಇರಲಿಲ್ಲ. ಬಾಬಾಗಳೂ ವಿಚಲಿತರಾಗದೆ ಕಣ್ಣುಬಿಟ್ಟುಕೊಂಡು ಸುಮ್ಮನೆ ನಿಂತಿದ್ದರು. ಕೆಳಗಿದ್ದ ಶರೀರವೂ ಉಸಿರಾಡಿದಂತ, ನರಳಿದಂತ ಯಾವ ಬದಲಾವಣೆಯೂ ಇಲ್ಲದೆ ಸುಮ್ಮನೆ ಮಲಗಿತ್ತು. ಅದು ಹೆಂಗಸಿನ ಹಾಗೂ ಮಾನವನ ದೇಹವೆಂಬುದು ಅದರಮೇಲಿದ್ದ ಸೀರೆ ಕುಪ್ಪುಸಗಳಿಂದ ಗೊತ್ತಾಗುತ್ತಿತ್ತೇ ವಿನಹ ಆ ಶರೀರವನ್ನ ಅಷ್ಟು ಸುಲಭಕ್ಕೆ ಪತ್ತೆಮಾಡಲಾಗದಷ್ಟು ಮಣ್ಣು ಮೆತ್ತಿತ್ತು. ಕಣ್ಣುಗಳು ಮುಚ್ಚಿದ್ದವು, ಅದರಮೇಲೂ ಮಣ್ಣಿತ್ತು. ಮೂಗಿನ ಹೊಳ್ಳೆಗಳಲ್ಲಿ, ಅರೆತೆರೆದ ಬಾಯಲ್ಲಿಯೂ ಮಣ್ಣಿತ್ತು. ಹೂತಿದ್ದ ದೇಹವನ್ನ ಹೊರತೆಗೆದಂತಿತ್ತು ಅದು. ರಾಮಾಜಿಗೂ ಅದು ಹೆಣವಿರಬಹುದೆಂಬ ಅನುಮಾನಬಂತು. ಅಷ್ಟರಲ್ಲಿ ಎಲ್ಲಿಂದಲೋ ಒಬ್ಬ ದೈತ್ಯ ಸನ್ಯಾಸಿ ವೇಗವಾಗಿ ಅಲ್ಲಿಗೆ ಬಂದ. ಶರೀರವನ್ನೊಮ್ಮೆ ದಿಟ್ಟಿಸಿದ ಸನ್ಯಾಸಿ ಸುತ್ತಲಿದ್ದ ಬಾಬಾಗಳಿಗೆ ಸನ್ನೆಯಲ್ಲಿ ಏನನ್ನೋ ಸೂಚಿಸಿದ. ಅದರಲ್ಲೊಬ್ಬ ಬಾಬ ಪಕ್ಕದಲ್ಲಿಯೇ ಮೊದಲೇ ಸಿದ್ದಮಾಡಿ ತಂದಿದ್ದ ಬಟ್ಟೆ ಗಂಟಿನಿಂದ ತಲೆಬುರುಡೆ ಕೆಲವು ಮಾಂಸದ ತುಂಡುಗಳನ್ನ ತೆಗೆದು ಎದುರಲ್ಲಿಟ್ಟ. ದೈತ್ಯ ಸನ್ಯಾಸಿ ತನ್ನ ತಲೆಗೂದಲನ್ನ ಜಡೆಕಟ್ಟಿ ಪದ್ಮಾಸನ ಹಾಕಿ ಕುಳಿತುಕೊಂಡ. ಮಾಂಸದ ತುಂಡುಗಳನ್ನ ತಲೆಬುರುಡೆಮೇಲಿಟ್ಟು, ಮಂತ್ರಗಳನ್ನ ಪಠಿಸಿದ. ರಾಮಾಜಿಗೆ ಎಲ್ಲವೂ ಕನಸೇ ಇರಬಹುದೆಂಬ ಅನುಮಾನವೂ ಬಂತು. ಬಾಬಾಗಳ ಕೈಲಿದ್ದ ಎರದು ಸೂಡಿಗಳನ್ನ ತಲೆಬುರುಡೆಯ ಎದುರಲ್ಲಿಟ್ಟು ಅದಕ್ಕೆ ರಾಳವನ್ನೆರಚಿದ. ಉಳಿದಿದ್ದ ಮಾಂಸವನ್ನ ಸೂಡಿಗೆ ಆಹುತಿಯೆಂಬಂತೆ ಅರ್ಪಿಸಿದ. ರಾಮಾಜಿಗೆ ಅಲ್ಲಿ ನಡೆಯುತ್ತಿದ್ದ ಯಾವುದೂ ಅರ್ಥವಾಗಲಿಲ್ಲ. ಅರ್ಥವಾಗುವಂತದ್ದು ಅಲ್ಲಿ ಯಾವುದೂ ನಡೆಯಲೂ ಇಲ್ಲ. ಸೂಡಿಗಳು ಹೋಮಜ್ವಾಲೆಯಾಗಿ ಬದಲಾಗಿದ್ದರಿಂದ ಅಲ್ಲಿ ಬೆಳಕು ಮಂದವಾಗಿತ್ತು. ದೈತ್ಯ ಸನ್ಯಾಸಿಯ ಆಣತಿಯಂತೆ ಒಬ್ಬ ಬಾಬ ಹೆಣದಂತೆ ಮಲಗಿದ್ದ ದೇಹದ ತಲೆಯಿಂದ ಕೆಲವು ಕೂದಲನ್ನ ಕಿತ್ತುತಂದು ದೈತ್ಯ ಸನ್ಯಾಸಿಯ ಕೈಯಲ್ಲಿಟ್ಟ. ಆ ಕೂದಲನ್ನ ತನ್ನ ತೋರ್ಬೆರಳಿಗೆ ಸುತ್ತಿಕೊಂಡ ಸನ್ಯಾಸಿ ಅದು ಪೂರ್ತಿ ಸುಡುವವರೆಗೂ ತನ್ನ ಬೆರಳನ್ನ ಬುರುಡೆಯೆದುರಲ್ಲಿದ್ದ ಸೂಡಿಗೆ ಹಿಡಿದ. ಕೂದಲು ಸುಟ್ಟು ಖಾಲಿಯಾದಮೇಲೆ ಬೆರಳನ್ನ ಮಾಂಸದ ಮುದ್ದೆಯಲ್ಲಿ ಹೊಕ್ಕಿಸಿ ಹೊರತೆಗೆದು ಅದನ್ನು ನೆಕ್ಕಿದ. ರಾಮಾಜಿಗೆ ಎಲ್ಲವೂ ಅಸಹ್ಯವೆನಿಸಿತು. ಯಾವ ವಾಮಮಾರ್ಗದ ಕತೆಯಲ್ಲಿಯೂ ಕೇಳಿರದ ಹುಚ್ಚು ಸಂದರ್ಭವೊಂದನ್ನ ತಾನು ನೋಡುತ್ತಿರುವುದಾಗಿ ಸಹಿಸಿಕೊಂಡ. ಬೆರಳನ್ನ ಹೊಕ್ಕಿಸಿದ ಮಾಂಸದ ಮುದ್ದೆಯನ್ನ ಹೆಣದಂತೆ ಮಲಗಿದ್ದ ದೇಹದ ಹಣೆಯಮೇಲಿಟ್ಟು ಅಲ್ಲಿದ್ದ ಬಾಬಾಗಳಿಗೆ ತೆರಳುವಂತೆ ಸೂಚಿಸಿದ. ಅವನ ಸನ್ನೆಯನ್ನೂ ಮಾತಿನಂತೆ ಭಾವಿಸಿದ ಅವರು ಅಲ್ಲಿಂದ ಜಾಗ ಖಾಲಿಮಾಡಿದರು. ನಂತರ ನಡೆದದ್ದು ಮಾತ್ರ ಕಲ್ಪನಾತೀತ. ರಾಮಾಜಿ ಸದ್ದುಮಾಡದೇ ವಾಂತಿಮಾಡಿದ. ಹೆಣದಂತೆ ಮಲಗಿದ್ದ ಶರೀರ ಅಪ್ಪಟ ಹೆಣವೇ ಆಗಿತ್ತು. ಆ ದೈತ್ಯ ಸನ್ಯಾಸಿ ಅದೇ ಹೆಣದ ಅಳಿದುಳಿದ ಬಟ್ಟೆಯನ್ನ ಬಿಚ್ಚಿ ನಗ್ನವಾಗಿಸಿ ತಾನೂ ನಗ್ನನಾಗಿ ಶವದೊಂದಿಗೇ ಮೈಥುನ ಮುಗಿಸಿದ. ರಾಮಾಜಿಗೆ ತನ್ನ ನೋವಿನಬಗ್ಗೆ ಗಮನವೂ ಬಾರದಷ್ಟು ವಿಕ್ರತ ಅಸಹ್ಯ ದೃಶ್ಯ ಅಲ್ಲಿ ನಡೆದುಹೋಗಿತ್ತು. ಇಷ್ಟೊತ್ತು ನಡೆದದ್ದು ಕನಸೇ ಆಗಿದ್ದರೆ ಒಳ್ಳೆಯದಾಗಿತ್ತೆಂದು ಬಯಸುವಷ್ಟರಲ್ಲಿ ಆ ಸನ್ಯಾಸಿ ಕಾಮತೀರಿದವನಾಗಿ ತನ್ನ ತಲೆಗೂದಲನ್ನ ಕಿತ್ತು ಹೆಣದ ಕೂದಲಿನ ಜೊತೆ ಅದನ್ನು ಸೇರಿಸಿ ಬುರುಡೆಯಮೇಲಿಟ್ಟು ಮತ್ತೇನೋ ಮಂತ್ರ ಪಠಿಸಿ ಅದನ್ನ ಅಗ್ನಿಗರ್ಪಿಸಿ ಎದ್ದುನಿಂತು ಕಿರುಚಿದ, ಭಂ ಬೋಲೆಯೆಂದು. ರಾಮಾಜಿ ತೀರದ ಆಯಾಸದಲ್ಲಿ ಮೂರ್ಛೆಹೋಗಿದ್ದ. ರಾತ್ರಿಯೆಂಬುದು ಎಂದಿನಂತೆ ಇಬ್ಬನಿಯ ಮಂಜಿನಲ್ಲಿ ತೊನೆಯುತ್ತಿತ್ತು. ಬೆತ್ತಲೆ ಶವ ವಿಕಾರವಾಗಿ ಮಲಗಿತ್ತು.




















Thursday, 6 December 2012

ಭಂ ಬೋಲೆ ೭




"ಮಿನಿಗಾದಿ ಪಂಗಡದವರು ಅಂದು ತಮ್ಮ ಸಹಕಾರ ನೀಡಿದ್ದಿದ್ದರೆ ಇಂದು ಮುದ್ವ ಎಂಬ ಹೆಸರು ನೆನಪಿಗೂ ಸಿಗದಂತೆ ಮರೆಯಾಗಿಹೋಗುತ್ತಿತ್ತು." ಅಲವತ್ತುಕೊಂಡ ಸುಪಿ.
"ಯಾಕೆ ಗುರುಗಳೆ ಅಂತದ್ದೇನಾಗಿತ್ತು?" ಕುತೂಹಲದಲ್ಲಿ ಕೇಳಿದ ಶಿಷ್ಯ ಮಜಗರ.
"ಉಪೀಟಿ ಎಂಬುದೊಂದು ಅದ್ವಿತೀಯವಾದ ವಿದ್ಯೆ. ಅದನ್ನು ಮೀರುವ ಯಾವ ತಂತ್ರವೂ ಅಂದು ತಿಳಿದಿರಲಿಲ್ಲ. ಆ ವಿದ್ಯೆ ಮಿನಿಗಾದಿಗಲ್ಲದೆ ಅಂದು ಮತ್ತಾರಿಗೂ ಗೊತ್ತಿರಲಿಲ್ಲ. ನನಗೆ ಉಪೀಟಿಗೆ ಬೇಕಾಗಿದ್ದ ಎಲ್ಲ ಅವಶ್ಯಕತೆಗಳ ಪರಿಚಯವಿತ್ತು. ಅದನ್ನ ಒದಗಿಸಲು ನಾನು ಸಿದ್ಧನಿದ್ದೆ ಕೂಡಾ. ಆದರೆ ಮುನಿಗಾದಿ ಅದನ್ನ ಪ್ರಾಣಾಪಹರಣಕ್ಕೆ ಪ್ರಯೋಗಿಸಲು ಒಪ್ಪಲೇ ಇಲ್ಲ. ಮುದ್ವನ ಭವಿಷ್ಯದ ಕ್ರೂರತೆಯನ್ನ ಮನಗಂಡಿದ್ದ ನನ್ನ ಗುರುಗಳು ಅಪಾಯದ ಮುನ್ಸೂಚನೆ ನೀಡಿದ್ದರು. ನನಗೆ ಅದರ ಭೀಕರತೆ ಅರ್ತವಾಗಿ ಮುನಿಗಾದಿಯಲ್ಲಿ ಮುದ್ವನನ್ನ ಮುಗಿಸಲು ಸಹಾಯ ಮಾಡಬೇಕಾಗಿ ಕೋರಿದ್ದೆ. ಆಗಲೇನಾದರೂ ಅದನ್ನವರು ಒಪ್ಪಿದ್ದರೆ ಇಂದು ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. " ಹಳೆಯದನ್ನೆಲ್ಲ ಮೆಲುಕಿ ಹೇಳಿದ ಸುಪಿ.
"ಮುದ್ವ ಈಗ ಮಾಡಿದ್ದಾದರೂ ಏನು? ಅಥವಾ ಅವನಿಂದ ಮುಂದೆ ಆಗುವುದಾದರೂ ಏನು? ಯಾಕೆ ಎಲ್ಲರೂ ಮುದ್ವನ ಬಗ್ಗೆ ಅಷ್ಟು ಭಯಗ್ರಸ್ಥರಾಗಿದ್ದಾರೆ?" ಅರ್ಥವಾಗದವನಂತೆ ಕೇಳಿದ ಮಜಗರ.
"ಅವ್ಯಕ್ತವಾಗಿ ಸಮಾಜದಲ್ಲಿ ಈಗಾಗಲೆ ಕಪ್ಪು ನೆರಳು ಚಾಚಿಕೊಂಡಾಗಿದೆ. ಆದರೆ ಯಾರೂ ಅದರಬಗ್ಗೆ ಯೋಚಿಸುತ್ತಿಲ್ಲ. ಹಣ, ಅಂತಸ್ತು, ಭೋಗದ ಸಾಧನೆಯೇ ಗುರಿಯಾಗಿಸಿಕೊಂಡಿರುವ ಮಾನವ, ಆ ನೆರಳ ಬಗ್ಗೆ ಕಲ್ಪನೆಯನ್ನೊ ಮಾಡುತ್ತಿಲ್ಲ. ಮುದ್ವ ಆ ಕತ್ತಲೆ ಸಾಮ್ರಾಜ್ಯದ ಅಧಿಪತಿಯಾಗುವ ಹಂಬಲದಲ್ಲಿ ತಂತ್ರವನ್ನ ಹೂಡುತ್ತಿದ್ದಾನೆ. ಯಾವುದು ಮೂಢನಂಬಿಕೆ, ಸುಳ್ಳು, ಅವೈಜ್ಞಾನಿಕ ಎಂದು ತಿಳಿದುಕೊಂಡು ಅದನ್ನ ತೀರಾ ಸರಳವಾಗಿ ಮನುಷ್ಯ ಪರಿಗಣಿಸಿದ್ದಾನೊ ಅದೇ ಅಗೋಚರ ಶಕ್ತಿ ಮನುಷ್ಯನ ಅಂತ್ಯಕ್ಕೆ ಕಾರಣವಾಗಲಿದೆ ಎಂಬ ಸತ್ಯ ಮಾತ್ರ ಜನರಿಗೆ ತಿಳಿಯುತ್ತಿಲ್ಲ."
"ಮನುಷ್ಯನ ಅಂತ್ಯವೇ?"... ಮಧ್ಯದಲ್ಲಿ ಕೇಳಿದ ಮಜಗರ.
"ಹೌದು. ಮುದ್ವ ತಂತ್ರಗಾರಿಕೆಯಲ್ಲಿ ಯಾರೂ ಸಾಧಿಸಲಾರದ ವಿದ್ಯೆಯನ್ನ ಸಾಧಿಸಿಬಿಟ್ಟಿದ್ದಾನೆ. ಅಷ್ಟೇ ಆದರೆ ತೊಂದರೆ ಏನೂ ಇರಲಿಲ್ಲ. ಆದರೆ ಸ್ವಭಾವತಹ ಮುದ್ವ ಕ್ರೂರಿ. ಅವನ ನಡುವಳಿಕೆ ಮತ್ತು ಗುರಿ ಕತ್ತಲೆ ಸಾಮ್ರಾಜ್ಯದ ಸ್ಥಾಪನೆ."
"ಕತ್ತಲೆ ಸಾಮ್ರಾಜ್ಯವೆಂದರೆ?" ಮತ್ತೆ ಕೇಳಿದ ಮಜಗರ.
"ಅದೇ ಈಗಿನ ಪ್ರಶ್ನೆ." ದೀರ್ಘವಾದ ಉಸಿರೆಳೆದುಕೊಂಡು, "ಮುಂದೆ ಏನಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಮುದ್ವ ಯಾವ ಪ್ರಯೋಗ ಮಾಡಲಿದ್ದಾನೆ ಎಂಬುದುದು ಸಹ ಪ್ರಶ್ನೆಯೇ. ಕತ್ತಲೆ ಸಾಮ್ರಾಜ್ಯದ ಅಸ್ತಿತ್ವ ಹೇಗಿರಬಹುದೆಂಬ ಊಹೆಯೂ ವಾಸ್ತವಕ್ಕೆ ನಿಲುಕದ್ದು. ಅದನ್ನ ಆತ ಹೇಗೆ ಸಾಧಿಸುತ್ತಾನೆಂಬುದು ನಿಗೂಢ. ಆದರೆ ಮುದ್ವ ಅದನ್ನ ಸಾಧಿಸುವಲ್ಲಿ ಸರ್ವಶಕ್ತ ಎಂಬುದರಲ್ಲಿ ಮಾತ್ರ ಯಾವ ಅನುಮಾನವೂ ಇಲ್ಲ. ಇದೆಲ್ಲದಕ್ಕೂ ಉತ್ತರ ಒಬ್ಬರಿಗೆ ಮಾತ್ರ ಗೊತ್ತಿರಬಹುದು." ಎಂದು ನಿಟ್ಟುಸಿರಿಟ್ಟ ಸುಪಿ.
"ಯಾರದು ಗುರುಗಳೇ"
"ಜುಕಾವು,(ಊರ್ದ್ವ ಗುರು)"
"ಅವರ್ಯಾರು?"
"ಅದೊಂದು ಶಕ್ತಿ. ದೇವಸಮಾನವಾದ ಚೇತನ. ತಂತ್ರಗಾರಿಕೆ ಮತ್ತು ವಾಮಮಾರ್ಗ ಕಂಡ ಪರಮ ಸಾಧಕ ಆತ. "
"ಮುದ್ವನನ್ನ ಅವರು ತಡೆಯಬಹುದಲ್ಲವೇ"
"ನಿನಗಿನ್ನೂ ಸಮಸ್ಯೆಯ ಸಂದರ್ಭದ ಹಾಗೂ ಈ ಗುಪ್ತ ಪ್ರಪಂಚದ ಅರಿವಾಗಿಲ್ಲ. ಆ ಉತ್ತರವನ್ನ ಅರ್ಥಮಾಡಿಕೊಳ್ಳಲು ನೀನಿನ್ನು ಸಣ್ಣವನು. ಮತ್ತು ಸುಲಭಕ್ಕೆ ತಡೆಯಲಾರದಷ್ಟು ಶಕ್ತಿಶಾಲಿ ಮುದ್ವ. ಸದ್ಯದ ಅಘೋಷಿತ ಪರಮ ಪರಾಕ್ರಮಿ ಅಘೋರಿಗಳಲ್ಲಿ ಮುದ್ವನೇ ದೊಡ್ಡವನು. ನೈಜವಾಗಿ ಜುಕಾವುಗಿಂತ ಬಲಿಷ್ಠ ಮುದ್ವ."
"ಗುರುಗಳೆ ಯಾಕಿಷ್ಟು ಗೊಂದಲ ಮಾಡುತ್ತಿದ್ದೀರಿ.? ಒಮ್ಮೆ ಜುಕಾವು ಪರಾಕ್ರಮಿ ಅಂತೀರಿ. ಮತ್ತೊಮ್ಮೆ ಮುದ್ವ ಅಸಮಾನ್ಯ ಅಂತೀರಿ ನನಗಂತೂ ಸ್ವಲ್ಪವೂ ಅರ್ಥವಾಗುತ್ತಿಲ್ಲ. ಯಾವುದು ಸತ್ಯ? ಅಸಹನೆಯಲ್ಲಿ ಹೇಳಿದ ಮಜಗರ
"ನಿನ್ನ ಗೊಂದಲ ಸರಿಯಾದದ್ದೇ. ನನಗೂ ಈ ಗಂಟನ್ನ ಸರಿಯಾಗಿ ಬಿಡಿಸಲಾಗುತ್ತಿಲ್ಲ. ಆದರೆ ಜುಕಾವು ಹೇಳುವಂತೆ ನಮಗೆ ಕಾಣುತ್ತಿರುವುದೆಲ್ಲ ಸುಳ್ಳೆಂಬುದೇ ಸತ್ಯ."
"ಹಾಗಂದ್ರೆ?" ಮತ್ತೆ ಪ್ರಶ್ನಿಸಿದ ಮಜಗರ
" ನನ್ನನ್ನ ಕಾಡಬೇಡ, ಮುಂದಿನ ಹುಣ್ಣಿಮೆಗೆ ಜುಕಾವು ಸರಿಜಾದ್ಗಡದಲ್ಲಿ ಎಲ್ಲ ಮುನಿಶ್ರೇಷ್ಠರನ್ನ ಬರಹೇಳಿದ್ದಾರೆ. ನಮಗೂ ಆಹ್ವಾನವಿದೆ. ಅವರು ಅಲ್ಲಿ ಎಲ್ಲವನ್ನ ತಿಳಿಸುತ್ತಾರೆ, ಮತ್ತು ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಚರ್ಚೆ ಮಾಡುವುದೇ ಆ ಸಭೆಯ ಉದ್ದೇಶ. ನಿನ್ನನ್ನೂ ಕರೆದುಕೊಂಡು ಹೋಗುತ್ತೇನೆ. ನಿನ್ನ ಅನುಮಾನ ಗೊಂದಲ ಎಲ್ಲ ಅಲ್ಲಿ ಪರಿಹಾರವಾಗುತ್ತದೆ. ಅಲ್ಲಿಯವರೆಗೆ ಸಹನೆಯಿರಲಿ" ಸಮಾಧಾನದಲ್ಲಿ ಅರಿವಾಗುವಂತೆ ಹೇಳಿದ ಸುಪಿ.
ಮಜಗರ ಮೌನದಲೇ ಸಮ್ಮತಿಸಿದ.