Friday 14 December 2012

ಭಂಬೋಲೇ.. ಆರಂಭ


ಆರಂಭ..

ಕಾಲುಗಳು ಇಬ್ಬರನ್ನ ಹೊತ್ತು ನಡೆದಂತೆ ಆಯಾಸಗೊಂಡಿದ್ದವು. ಹೆಜ್ಜೆ ಕಿತ್ತಿಡಲು ಮನಸಿದ್ದರೂ, ಹಾಗೂ ಹೀಗೂ ಹುಡುಕಿಕೊಂಡ ಮಾರ್ಗವಿದ್ದರೂ, ನಡೆದು ಈಗಿರುವ ಪರಿಸ್ಥಿತಿಗಿಂತ ಸುಸ್ಥಿತಿಗೆ ಸೇರಲು ಶಕ್ತಿಯಿರಲಿಲ್ಲ. ಕಾಡು ಕತ್ತಲಾದಂತೆ ಸ್ವಭಾವಿಕವಾಗಿ ಅಪರಿಚಿತ ಲೋಕವೊಂದನ್ನ ಸೃಷ್ಟಿಸುತ್ತಿದೆಯೆಂಬ ಆತಂಕಬೇರೆ ಮನಸನ್ನ ಆವರಿಸುತ್ತಿತ್ತು. ಇಡೀ ಕಾಡಿನಲ್ಲಿ ಯಾವುದೋ ಮೂಲೆಯಲ್ಲಿ ಯಕ್ಕಶ್ಚಿತ್ ಜೀವವೊಂದು ಸರಿದಾಡಿದಂತೆ ರಾಮಾಜಿ, ತರಗೆಲೆಗಳ ರಾಷಿಯಲ್ಲಿ ತೆವಳುತ್ತ ಸಾಗುತ್ತಿದ್ದ. ತಾನು ಆ ಜಾಗಕ್ಕೆ ಬಂದಿದ್ದೇನಕ್ಕೆಂಬ ಇತಿಹಾಸ ಅವನ ನೆನಪಿನಲ್ಲಿರಲಿಲ್ಲ. ಎಲ್ಲೊ ಅಲ್ಲಲ್ಲಿ ಯಾವ್ಯಾವುದೋ ಸಂದರ್ಭಗಳನ್ನ ನೆನಪಿಸುವ ಆಸ್ಪಷ್ಟ ಚಿತ್ರಗಳು. ಎಲ್ಲಿಗೆ ಹೋಗಬೇಕೆಂಬ ಗುರಿಯೂ ಇರದ ಕಾರಣ, ಕಾಡಿನ ದಟ್ಟತೆ ಕಡಿಮೆಯಿರುವ ಜಾಗವನ್ನ ಸೇರುವುದೇ ಸದ್ಯದ ಗುರಿಯೆಂದು ರಾಮಾಜಿ ಹೊರಳಾಡಿದ.
ಇರುಳು ಆವರಿಸಿದಂತೆ, ಭೀತಿಯೂ ಉಚಿತವಾಗಿ ಎದೆಗಿಳಿಯುತ್ತದೆಂಬ ಸತ್ಯ ರಾಮಾಜಿಗೆ ಗೊತ್ತಿತ್ತು. ಅದಷ್ಟುಬೇಗ ಸುರಕ್ಷಿತ ಪ್ರದೇಶವೊಂದನ್ನ ತಲುಪುವುದು ಅನಿವಾರ್ಯವಾಗಿತ್ತವನಿಗೆ. ಕೊರೆಯುವ ಚಳಿ, ಸಣ್ಣಗೆ ಒಂದೇಸಮನೆ ಬೀಸುವ ಗಾಳಿ, ಅಪರಿಚಿತ ಸದ್ದು, ಅನಾಮಿಕ ಜೀವಿಗಳ ಕೂಗು ಕೆಲವು ಪರಿಚಿತವೆನಿಸುವ ಚೀತ್ಕಾರಗಳು. ತನ್ನ ವಿಧಿಯನ್ನ ತಾನೇ ಶಪಿಸಿಕೊಂಡ. ಆದರೆ ಅದರಿಂದ ಯಾವ ಲಾಭವೂ ಇರಲಿಲ್ಲ. ಆಗಿದ್ದಾಗಿದೆಯೆಂದು ತೆವಳುವುದೊಂದೇ ಉಳಿದ ಮಾರ್ಗವಾಗಿತ್ತು. ಹೇಗೋ ಸಾಹಸಮಾಡಿ ಎದ್ದುನಿಂತು ನಡೆದುಬಿಡುವುದೆಂದು ತೀರ್ಮಾನಿಸಿದ. ಎದ್ದುನಿಲ್ಲಲು ಗಾಯದಲ್ಲಿ ಜಜ್ಜಿದ್ದ ಮಂಡಿ ಸಹಕರಿಸಲಿಲ್ಲ. ಪಾದಗಳಲ್ಲಿ ತೊನೆಯುತ್ತಿದ್ದ ರಕ್ತ ಕಮಟುತ್ತಿತ್ತು. ಕಾಲ್ಗಂಟು ಊದಿತ್ತು. ತೆವಳುತ್ತಲೇ ಸಾಗಿದರೆ ಯವಾಗಬೇಕಾದರೂ ಅನಾಯಾಸವಾಗಿ ಕಾಡು ಪ್ರಾಣಿಗೆ ಆಹಾರವಾಗುವ ಅವಕಾಶವಿದ್ದಿದ್ದರಿಂದ  ಸಧ್ಯವಾದಷ್ಟು ನಡೆದುಬಿಡುವುದೇ ಸರಿಯೆಂದನಿಸಿತು ರಾಮಾಜಿಗೆ. ಸುತ್ತಲಿದ್ದ ಪೊದೆಗಳನ್ನ ಆಧಾರವಾಗಿಸಿಕೊಂಡು ಹೇಗೋ ಎದ್ದು ನಿಂತ. ನಿಂತಷ್ಟೇ ಬೇಗ ಮತ್ತೆ ಬಿದ್ದ. ರಾಮಾಜಿಗೆ ಹೇಳಹೆಸರಿಲ್ಲದಂತೆ ಸಾಯುವುದು ಇಷ್ಟವಿರಲಿಲ್ಲ. ಶರಿರ ಸಣ್ಣಗೆ, ಮಿತವಾದ ಎತ್ತರದಲ್ಲಿ ಪೀಚಾಗಿದ್ದರೂ ರಾಮಾಜಿ ಮಾನಸಿಕವಾಗಿ ಬಹಳ ಗಟ್ಟಿಗ. ಯಾವುದನ್ನೂ ಅಷ್ಟು ಸುಲಭಕ್ಕೆ ಸೋತವನಲ್ಲ. ಹಾಗೆ ತಾನು ದಾರುಣ ಪರಿಸ್ಥಿಯಲ್ಲಿದ್ದರೂ ಅದನ್ನ ಬದಿಗೊತ್ತಿ ಗೊತ್ತಿರದ ಗುರಿಯತ್ತ ಸಾಗಲು ಇಷ್ಟು ಹಠ ಮಾಡುತ್ತಿರುವುದಾದರೂ ಯಾಕೆಂಬುದು ಅರಿವಾಗಲು ರಾಮಾಜಿಗೆ ಹಳೆಯದು ನೆನಪಾಗಲಿಲ್ಲ. ಮತ್ತೆ ಹೇಗೋ ಎದ್ದುನಿಂತು, ಮತ್ತದೇ ಪೊದೆಗಳನ್ನ ಬಳಸಿಕೊಂಡು ಅರೆಜೀರ್ಣ ಶರೀರವನ್ನ ಸಾಧ್ಯವಾದಷ್ಟು ಮುಂದೂಡಿದ. ಅನಿವಾರ್ಯತೆಗಳು ಅರಿವಾಗದ ಕೆಲವು ಶಕ್ತಿಗಳನ್ನ ಎಚ್ಚೆಬ್ಬಿಸುತ್ತವೆಂಬ ಹೊಸ ಸತ್ಯ ರಾಮಾಜಿಗೆ ಅರಿವಾಗಿದ್ದೇ ಆಗ. ಧೂಮದಲ್ಲಿ, ಇಬ್ಬನಿಯ ಮಂಜು ಆವರಿಸಿದ್ದರಿಂದ ಮುಂದಿರುವುದೆಲ್ಲ ಹತ್ತಿರ ಬಂದಂತೂ, ಏನೆಂದು ತಿಳಿಯುತ್ತಿರಲಿಲ್ಲ. ಕುಂಟುತ್ತಲೇ ರಾಮಾಜಿ ಫರ್ಲಾಂಗು ದೂರ ಕ್ರಮಿಸಿಬಿಟ್ಟ. ನೋವಿಗೂ ಶರೀರ ಹೊಂದಿಕೊಂಡು ಮತ್ತಷ್ಟು ದೂರ ನಡೆಯಲು ಅನುಮತಿ ನೀಡಿತೆಂಬಂತೆ ತರಗೆಲೆಗಳನ್ನ ಗಿಡಗಂಟಿಗಳನ್ನ ಬಾಚುತ್ತ ಮುಂದುವರಿದ. ಇಬ್ಬನಿಯ ಮಂಜು ವಿಚಿತ್ರವಾದ ಪರಿಮಳವನ್ನ ಸೂಸುತ್ತಿತ್ತು. ತನಗೆ ಎಚ್ಚರವಾದಾಗಿನಿಂದ ಆ ಕಾಡಿನಲ್ಲಿ ಅಂತಹದೇ ಒಂದು ಸುವಾಸನೆ. ರಾತ್ರಿಯಲ್ಲಿ ಹೂಬಿರಿದು ಹಾಗಾಗಿರಬಹುದೆಂಬ ಅನುಮಾನ ಅವನಿಗೆ ಸರಿಯೆನಿಸಿರಲಿಲ್ಲವಾದರೂ ಅದರೆಡೆಗೆ ಹೆಚ್ಚು ಗಮನಕೊಟ್ಟಿರಲಿಲ್ಲ. ಅದೇ ಸುವಾಸನೆ ತಾನು ಮುಂದುವರಿದಂತೆ ಹೆಚ್ಚುತ್ತಹೋಯಿತು. ರಾಮಾಜಿ ಅದರಿಂದ ಅನಾಹುತವನ್ನು ಊಹಿಸಿದರೂ ಸುವಾಸನೆಯಿಂದ ಗಂಭೀರ ಪರಿಣಾಮಗಳಾಗುವುದು ಸುಲಭಕ್ಕೆ ಸಾಧ್ಯವಿರಲಿಲ್ಲ. ಆದರೆ ಆ ಸುವಾಸನೆಯ ಮೂಲದ ಬಗ್ಗೆ ರಾಮಾಜಿಗೆ ಕುತೂಹಲ ಶುರುವಾಯ್ತು. ಆ ಕುತೂಹಲದಲ್ಲಿಯೇ ತನಗೇ ಅರಿವಿಲ್ಲದಂತೆ ರಾಮಾಜಿ ಸುಮಾರು ದೂರ ನಡೆದುಬಂದಿದ್ದ. ದೂರದಲ್ಲೆಲ್ಲೋ ಬೆಳಕಿನ ಪ್ರಭೆಯೊಂದು ಕಾಣಿಸಿದಂತಾಯ್ತು. ಮತ್ತೊಂದು ಜೀವದ ಸುಳಿವೇ ಇಲ್ಲದ ಆ ಭೀಕರ ಕಾಡಿನಲ್ಲಿ ಬೆಳಕು ಕಾಣಿಸಿದ್ದು ಒಳ್ಳೆಯದೋ ಅಥವಾ ಮತ್ತಿನ್ನೇನೋ ಎಂಬ ಅನುಮಾನವೂ ಅವನನ್ನ ಹೊಕ್ಕಿತು. ಅವಸರಮಾಡದೆ ಆ ಬೆಳಕಿನ ಜಾಡನ್ನ ಹಿಡಿದು ಸಾಧ್ಯವಾದಷ್ಟು ಸದ್ದು ಮಾಡದೆ ತೆವಳಿಕೊಂಡು ಅದರೆಡೆಗೆ ನಡೆದ. ನಾಲ್ಕು ಸೂಡಿಹಿಡಿದು ಜಟಾಧಾರಿ ಬಾಬಗಳು ನಿಂತಿದ್ದರು. ಅಪಾಯವಾಗದಷ್ಟು ದೂರದಲ್ಲಿ, ತನ್ನ ಇರುವಿಕೆ ಆ ಬಾಬಾಗಳಿಗೆ ಅರಿವಾಗದಂತೆ ಮರದ ಬೊಡ್ಡೆಯಲ್ಲಿ ತನ್ನನ್ನ ತಾನು ಹುದುಗಿಸಿಕೋಂಡ. 
ಕಾವಿ ಲಂಗೋಟಿಯಲ್ಲಿ, ಮೈತುಂಬ ಭಸ್ಮಮೆತ್ತಿಕೊಂಡು ಜಡೆಹೊತ್ತ ಬಾಬಾಗಳು ಸೂಡಿಹಿಡಿದುಕೊಂಡು, ಸುಮ್ಮನೆ ನಿಂತಿದ್ದರು. ಅವರ ಎದುರಲ್ಲಿ ಶರೀರವೊಂದು ಮಲಗಿತ್ತು. ಕೆಲಹೊತ್ತು ಅಲ್ಲಿ ಯಾವ ಚಲನೆಯೂ ಇರಲಿಲ್ಲ. ಬಾಬಾಗಳೂ ವಿಚಲಿತರಾಗದೆ ಕಣ್ಣುಬಿಟ್ಟುಕೊಂಡು ಸುಮ್ಮನೆ ನಿಂತಿದ್ದರು. ಕೆಳಗಿದ್ದ ಶರೀರವೂ ಉಸಿರಾಡಿದಂತ, ನರಳಿದಂತ ಯಾವ ಬದಲಾವಣೆಯೂ ಇಲ್ಲದೆ ಸುಮ್ಮನೆ ಮಲಗಿತ್ತು. ಅದು ಹೆಂಗಸಿನ ಹಾಗೂ ಮಾನವನ ದೇಹವೆಂಬುದು ಅದರಮೇಲಿದ್ದ ಸೀರೆ ಕುಪ್ಪುಸಗಳಿಂದ ಗೊತ್ತಾಗುತ್ತಿತ್ತೇ ವಿನಹ ಆ ಶರೀರವನ್ನ ಅಷ್ಟು ಸುಲಭಕ್ಕೆ ಪತ್ತೆಮಾಡಲಾಗದಷ್ಟು ಮಣ್ಣು ಮೆತ್ತಿತ್ತು. ಕಣ್ಣುಗಳು ಮುಚ್ಚಿದ್ದವು, ಅದರಮೇಲೂ ಮಣ್ಣಿತ್ತು. ಮೂಗಿನ ಹೊಳ್ಳೆಗಳಲ್ಲಿ, ಅರೆತೆರೆದ ಬಾಯಲ್ಲಿಯೂ ಮಣ್ಣಿತ್ತು. ಹೂತಿದ್ದ ದೇಹವನ್ನ ಹೊರತೆಗೆದಂತಿತ್ತು ಅದು. ರಾಮಾಜಿಗೂ ಅದು ಹೆಣವಿರಬಹುದೆಂಬ ಅನುಮಾನಬಂತು. ಅಷ್ಟರಲ್ಲಿ ಎಲ್ಲಿಂದಲೋ ಒಬ್ಬ ದೈತ್ಯ ಸನ್ಯಾಸಿ ವೇಗವಾಗಿ ಅಲ್ಲಿಗೆ ಬಂದ. ಶರೀರವನ್ನೊಮ್ಮೆ ದಿಟ್ಟಿಸಿದ ಸನ್ಯಾಸಿ ಸುತ್ತಲಿದ್ದ ಬಾಬಾಗಳಿಗೆ ಸನ್ನೆಯಲ್ಲಿ ಏನನ್ನೋ ಸೂಚಿಸಿದ. ಅದರಲ್ಲೊಬ್ಬ ಬಾಬ ಪಕ್ಕದಲ್ಲಿಯೇ ಮೊದಲೇ ಸಿದ್ದಮಾಡಿ ತಂದಿದ್ದ ಬಟ್ಟೆ ಗಂಟಿನಿಂದ ತಲೆಬುರುಡೆ ಕೆಲವು ಮಾಂಸದ ತುಂಡುಗಳನ್ನ ತೆಗೆದು ಎದುರಲ್ಲಿಟ್ಟ. ದೈತ್ಯ ಸನ್ಯಾಸಿ ತನ್ನ ತಲೆಗೂದಲನ್ನ ಜಡೆಕಟ್ಟಿ ಪದ್ಮಾಸನ ಹಾಕಿ ಕುಳಿತುಕೊಂಡ. ಮಾಂಸದ ತುಂಡುಗಳನ್ನ ತಲೆಬುರುಡೆಮೇಲಿಟ್ಟು, ಮಂತ್ರಗಳನ್ನ ಪಠಿಸಿದ. ರಾಮಾಜಿಗೆ ಎಲ್ಲವೂ ಕನಸೇ ಇರಬಹುದೆಂಬ ಅನುಮಾನವೂ ಬಂತು. ಬಾಬಾಗಳ ಕೈಲಿದ್ದ ಎರದು ಸೂಡಿಗಳನ್ನ ತಲೆಬುರುಡೆಯ ಎದುರಲ್ಲಿಟ್ಟು ಅದಕ್ಕೆ ರಾಳವನ್ನೆರಚಿದ. ಉಳಿದಿದ್ದ ಮಾಂಸವನ್ನ ಸೂಡಿಗೆ ಆಹುತಿಯೆಂಬಂತೆ ಅರ್ಪಿಸಿದ. ರಾಮಾಜಿಗೆ ಅಲ್ಲಿ ನಡೆಯುತ್ತಿದ್ದ ಯಾವುದೂ ಅರ್ಥವಾಗಲಿಲ್ಲ. ಅರ್ಥವಾಗುವಂತದ್ದು ಅಲ್ಲಿ ಯಾವುದೂ ನಡೆಯಲೂ ಇಲ್ಲ. ಸೂಡಿಗಳು ಹೋಮಜ್ವಾಲೆಯಾಗಿ ಬದಲಾಗಿದ್ದರಿಂದ ಅಲ್ಲಿ ಬೆಳಕು ಮಂದವಾಗಿತ್ತು. ದೈತ್ಯ ಸನ್ಯಾಸಿಯ ಆಣತಿಯಂತೆ ಒಬ್ಬ ಬಾಬ ಹೆಣದಂತೆ ಮಲಗಿದ್ದ ದೇಹದ ತಲೆಯಿಂದ ಕೆಲವು ಕೂದಲನ್ನ ಕಿತ್ತುತಂದು ದೈತ್ಯ ಸನ್ಯಾಸಿಯ ಕೈಯಲ್ಲಿಟ್ಟ. ಆ ಕೂದಲನ್ನ ತನ್ನ ತೋರ್ಬೆರಳಿಗೆ ಸುತ್ತಿಕೊಂಡ ಸನ್ಯಾಸಿ ಅದು ಪೂರ್ತಿ ಸುಡುವವರೆಗೂ ತನ್ನ ಬೆರಳನ್ನ ಬುರುಡೆಯೆದುರಲ್ಲಿದ್ದ ಸೂಡಿಗೆ ಹಿಡಿದ. ಕೂದಲು ಸುಟ್ಟು ಖಾಲಿಯಾದಮೇಲೆ ಬೆರಳನ್ನ ಮಾಂಸದ ಮುದ್ದೆಯಲ್ಲಿ ಹೊಕ್ಕಿಸಿ ಹೊರತೆಗೆದು ಅದನ್ನು ನೆಕ್ಕಿದ. ರಾಮಾಜಿಗೆ ಎಲ್ಲವೂ ಅಸಹ್ಯವೆನಿಸಿತು. ಯಾವ ವಾಮಮಾರ್ಗದ ಕತೆಯಲ್ಲಿಯೂ ಕೇಳಿರದ ಹುಚ್ಚು ಸಂದರ್ಭವೊಂದನ್ನ ತಾನು ನೋಡುತ್ತಿರುವುದಾಗಿ ಸಹಿಸಿಕೊಂಡ. ಬೆರಳನ್ನ ಹೊಕ್ಕಿಸಿದ ಮಾಂಸದ ಮುದ್ದೆಯನ್ನ ಹೆಣದಂತೆ ಮಲಗಿದ್ದ ದೇಹದ ಹಣೆಯಮೇಲಿಟ್ಟು ಅಲ್ಲಿದ್ದ ಬಾಬಾಗಳಿಗೆ ತೆರಳುವಂತೆ ಸೂಚಿಸಿದ. ಅವನ ಸನ್ನೆಯನ್ನೂ ಮಾತಿನಂತೆ ಭಾವಿಸಿದ ಅವರು ಅಲ್ಲಿಂದ ಜಾಗ ಖಾಲಿಮಾಡಿದರು. ನಂತರ ನಡೆದದ್ದು ಮಾತ್ರ ಕಲ್ಪನಾತೀತ. ರಾಮಾಜಿ ಸದ್ದುಮಾಡದೇ ವಾಂತಿಮಾಡಿದ. ಹೆಣದಂತೆ ಮಲಗಿದ್ದ ಶರೀರ ಅಪ್ಪಟ ಹೆಣವೇ ಆಗಿತ್ತು. ಆ ದೈತ್ಯ ಸನ್ಯಾಸಿ ಅದೇ ಹೆಣದ ಅಳಿದುಳಿದ ಬಟ್ಟೆಯನ್ನ ಬಿಚ್ಚಿ ನಗ್ನವಾಗಿಸಿ ತಾನೂ ನಗ್ನನಾಗಿ ಶವದೊಂದಿಗೇ ಮೈಥುನ ಮುಗಿಸಿದ. ರಾಮಾಜಿಗೆ ತನ್ನ ನೋವಿನಬಗ್ಗೆ ಗಮನವೂ ಬಾರದಷ್ಟು ವಿಕ್ರತ ಅಸಹ್ಯ ದೃಶ್ಯ ಅಲ್ಲಿ ನಡೆದುಹೋಗಿತ್ತು. ಇಷ್ಟೊತ್ತು ನಡೆದದ್ದು ಕನಸೇ ಆಗಿದ್ದರೆ ಒಳ್ಳೆಯದಾಗಿತ್ತೆಂದು ಬಯಸುವಷ್ಟರಲ್ಲಿ ಆ ಸನ್ಯಾಸಿ ಕಾಮತೀರಿದವನಾಗಿ ತನ್ನ ತಲೆಗೂದಲನ್ನ ಕಿತ್ತು ಹೆಣದ ಕೂದಲಿನ ಜೊತೆ ಅದನ್ನು ಸೇರಿಸಿ ಬುರುಡೆಯಮೇಲಿಟ್ಟು ಮತ್ತೇನೋ ಮಂತ್ರ ಪಠಿಸಿ ಅದನ್ನ ಅಗ್ನಿಗರ್ಪಿಸಿ ಎದ್ದುನಿಂತು ಕಿರುಚಿದ, ಭಂ ಬೋಲೆಯೆಂದು. ರಾಮಾಜಿ ತೀರದ ಆಯಾಸದಲ್ಲಿ ಮೂರ್ಛೆಹೋಗಿದ್ದ. ರಾತ್ರಿಯೆಂಬುದು ಎಂದಿನಂತೆ ಇಬ್ಬನಿಯ ಮಂಜಿನಲ್ಲಿ ತೊನೆಯುತ್ತಿತ್ತು. ಬೆತ್ತಲೆ ಶವ ವಿಕಾರವಾಗಿ ಮಲಗಿತ್ತು.




















No comments:

Post a Comment