Thursday 6 December 2012

ಭಂ ಬೋಲೆ ೭




"ಮಿನಿಗಾದಿ ಪಂಗಡದವರು ಅಂದು ತಮ್ಮ ಸಹಕಾರ ನೀಡಿದ್ದಿದ್ದರೆ ಇಂದು ಮುದ್ವ ಎಂಬ ಹೆಸರು ನೆನಪಿಗೂ ಸಿಗದಂತೆ ಮರೆಯಾಗಿಹೋಗುತ್ತಿತ್ತು." ಅಲವತ್ತುಕೊಂಡ ಸುಪಿ.
"ಯಾಕೆ ಗುರುಗಳೆ ಅಂತದ್ದೇನಾಗಿತ್ತು?" ಕುತೂಹಲದಲ್ಲಿ ಕೇಳಿದ ಶಿಷ್ಯ ಮಜಗರ.
"ಉಪೀಟಿ ಎಂಬುದೊಂದು ಅದ್ವಿತೀಯವಾದ ವಿದ್ಯೆ. ಅದನ್ನು ಮೀರುವ ಯಾವ ತಂತ್ರವೂ ಅಂದು ತಿಳಿದಿರಲಿಲ್ಲ. ಆ ವಿದ್ಯೆ ಮಿನಿಗಾದಿಗಲ್ಲದೆ ಅಂದು ಮತ್ತಾರಿಗೂ ಗೊತ್ತಿರಲಿಲ್ಲ. ನನಗೆ ಉಪೀಟಿಗೆ ಬೇಕಾಗಿದ್ದ ಎಲ್ಲ ಅವಶ್ಯಕತೆಗಳ ಪರಿಚಯವಿತ್ತು. ಅದನ್ನ ಒದಗಿಸಲು ನಾನು ಸಿದ್ಧನಿದ್ದೆ ಕೂಡಾ. ಆದರೆ ಮುನಿಗಾದಿ ಅದನ್ನ ಪ್ರಾಣಾಪಹರಣಕ್ಕೆ ಪ್ರಯೋಗಿಸಲು ಒಪ್ಪಲೇ ಇಲ್ಲ. ಮುದ್ವನ ಭವಿಷ್ಯದ ಕ್ರೂರತೆಯನ್ನ ಮನಗಂಡಿದ್ದ ನನ್ನ ಗುರುಗಳು ಅಪಾಯದ ಮುನ್ಸೂಚನೆ ನೀಡಿದ್ದರು. ನನಗೆ ಅದರ ಭೀಕರತೆ ಅರ್ತವಾಗಿ ಮುನಿಗಾದಿಯಲ್ಲಿ ಮುದ್ವನನ್ನ ಮುಗಿಸಲು ಸಹಾಯ ಮಾಡಬೇಕಾಗಿ ಕೋರಿದ್ದೆ. ಆಗಲೇನಾದರೂ ಅದನ್ನವರು ಒಪ್ಪಿದ್ದರೆ ಇಂದು ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. " ಹಳೆಯದನ್ನೆಲ್ಲ ಮೆಲುಕಿ ಹೇಳಿದ ಸುಪಿ.
"ಮುದ್ವ ಈಗ ಮಾಡಿದ್ದಾದರೂ ಏನು? ಅಥವಾ ಅವನಿಂದ ಮುಂದೆ ಆಗುವುದಾದರೂ ಏನು? ಯಾಕೆ ಎಲ್ಲರೂ ಮುದ್ವನ ಬಗ್ಗೆ ಅಷ್ಟು ಭಯಗ್ರಸ್ಥರಾಗಿದ್ದಾರೆ?" ಅರ್ಥವಾಗದವನಂತೆ ಕೇಳಿದ ಮಜಗರ.
"ಅವ್ಯಕ್ತವಾಗಿ ಸಮಾಜದಲ್ಲಿ ಈಗಾಗಲೆ ಕಪ್ಪು ನೆರಳು ಚಾಚಿಕೊಂಡಾಗಿದೆ. ಆದರೆ ಯಾರೂ ಅದರಬಗ್ಗೆ ಯೋಚಿಸುತ್ತಿಲ್ಲ. ಹಣ, ಅಂತಸ್ತು, ಭೋಗದ ಸಾಧನೆಯೇ ಗುರಿಯಾಗಿಸಿಕೊಂಡಿರುವ ಮಾನವ, ಆ ನೆರಳ ಬಗ್ಗೆ ಕಲ್ಪನೆಯನ್ನೊ ಮಾಡುತ್ತಿಲ್ಲ. ಮುದ್ವ ಆ ಕತ್ತಲೆ ಸಾಮ್ರಾಜ್ಯದ ಅಧಿಪತಿಯಾಗುವ ಹಂಬಲದಲ್ಲಿ ತಂತ್ರವನ್ನ ಹೂಡುತ್ತಿದ್ದಾನೆ. ಯಾವುದು ಮೂಢನಂಬಿಕೆ, ಸುಳ್ಳು, ಅವೈಜ್ಞಾನಿಕ ಎಂದು ತಿಳಿದುಕೊಂಡು ಅದನ್ನ ತೀರಾ ಸರಳವಾಗಿ ಮನುಷ್ಯ ಪರಿಗಣಿಸಿದ್ದಾನೊ ಅದೇ ಅಗೋಚರ ಶಕ್ತಿ ಮನುಷ್ಯನ ಅಂತ್ಯಕ್ಕೆ ಕಾರಣವಾಗಲಿದೆ ಎಂಬ ಸತ್ಯ ಮಾತ್ರ ಜನರಿಗೆ ತಿಳಿಯುತ್ತಿಲ್ಲ."
"ಮನುಷ್ಯನ ಅಂತ್ಯವೇ?"... ಮಧ್ಯದಲ್ಲಿ ಕೇಳಿದ ಮಜಗರ.
"ಹೌದು. ಮುದ್ವ ತಂತ್ರಗಾರಿಕೆಯಲ್ಲಿ ಯಾರೂ ಸಾಧಿಸಲಾರದ ವಿದ್ಯೆಯನ್ನ ಸಾಧಿಸಿಬಿಟ್ಟಿದ್ದಾನೆ. ಅಷ್ಟೇ ಆದರೆ ತೊಂದರೆ ಏನೂ ಇರಲಿಲ್ಲ. ಆದರೆ ಸ್ವಭಾವತಹ ಮುದ್ವ ಕ್ರೂರಿ. ಅವನ ನಡುವಳಿಕೆ ಮತ್ತು ಗುರಿ ಕತ್ತಲೆ ಸಾಮ್ರಾಜ್ಯದ ಸ್ಥಾಪನೆ."
"ಕತ್ತಲೆ ಸಾಮ್ರಾಜ್ಯವೆಂದರೆ?" ಮತ್ತೆ ಕೇಳಿದ ಮಜಗರ.
"ಅದೇ ಈಗಿನ ಪ್ರಶ್ನೆ." ದೀರ್ಘವಾದ ಉಸಿರೆಳೆದುಕೊಂಡು, "ಮುಂದೆ ಏನಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಮುದ್ವ ಯಾವ ಪ್ರಯೋಗ ಮಾಡಲಿದ್ದಾನೆ ಎಂಬುದುದು ಸಹ ಪ್ರಶ್ನೆಯೇ. ಕತ್ತಲೆ ಸಾಮ್ರಾಜ್ಯದ ಅಸ್ತಿತ್ವ ಹೇಗಿರಬಹುದೆಂಬ ಊಹೆಯೂ ವಾಸ್ತವಕ್ಕೆ ನಿಲುಕದ್ದು. ಅದನ್ನ ಆತ ಹೇಗೆ ಸಾಧಿಸುತ್ತಾನೆಂಬುದು ನಿಗೂಢ. ಆದರೆ ಮುದ್ವ ಅದನ್ನ ಸಾಧಿಸುವಲ್ಲಿ ಸರ್ವಶಕ್ತ ಎಂಬುದರಲ್ಲಿ ಮಾತ್ರ ಯಾವ ಅನುಮಾನವೂ ಇಲ್ಲ. ಇದೆಲ್ಲದಕ್ಕೂ ಉತ್ತರ ಒಬ್ಬರಿಗೆ ಮಾತ್ರ ಗೊತ್ತಿರಬಹುದು." ಎಂದು ನಿಟ್ಟುಸಿರಿಟ್ಟ ಸುಪಿ.
"ಯಾರದು ಗುರುಗಳೇ"
"ಜುಕಾವು,(ಊರ್ದ್ವ ಗುರು)"
"ಅವರ್ಯಾರು?"
"ಅದೊಂದು ಶಕ್ತಿ. ದೇವಸಮಾನವಾದ ಚೇತನ. ತಂತ್ರಗಾರಿಕೆ ಮತ್ತು ವಾಮಮಾರ್ಗ ಕಂಡ ಪರಮ ಸಾಧಕ ಆತ. "
"ಮುದ್ವನನ್ನ ಅವರು ತಡೆಯಬಹುದಲ್ಲವೇ"
"ನಿನಗಿನ್ನೂ ಸಮಸ್ಯೆಯ ಸಂದರ್ಭದ ಹಾಗೂ ಈ ಗುಪ್ತ ಪ್ರಪಂಚದ ಅರಿವಾಗಿಲ್ಲ. ಆ ಉತ್ತರವನ್ನ ಅರ್ಥಮಾಡಿಕೊಳ್ಳಲು ನೀನಿನ್ನು ಸಣ್ಣವನು. ಮತ್ತು ಸುಲಭಕ್ಕೆ ತಡೆಯಲಾರದಷ್ಟು ಶಕ್ತಿಶಾಲಿ ಮುದ್ವ. ಸದ್ಯದ ಅಘೋಷಿತ ಪರಮ ಪರಾಕ್ರಮಿ ಅಘೋರಿಗಳಲ್ಲಿ ಮುದ್ವನೇ ದೊಡ್ಡವನು. ನೈಜವಾಗಿ ಜುಕಾವುಗಿಂತ ಬಲಿಷ್ಠ ಮುದ್ವ."
"ಗುರುಗಳೆ ಯಾಕಿಷ್ಟು ಗೊಂದಲ ಮಾಡುತ್ತಿದ್ದೀರಿ.? ಒಮ್ಮೆ ಜುಕಾವು ಪರಾಕ್ರಮಿ ಅಂತೀರಿ. ಮತ್ತೊಮ್ಮೆ ಮುದ್ವ ಅಸಮಾನ್ಯ ಅಂತೀರಿ ನನಗಂತೂ ಸ್ವಲ್ಪವೂ ಅರ್ಥವಾಗುತ್ತಿಲ್ಲ. ಯಾವುದು ಸತ್ಯ? ಅಸಹನೆಯಲ್ಲಿ ಹೇಳಿದ ಮಜಗರ
"ನಿನ್ನ ಗೊಂದಲ ಸರಿಯಾದದ್ದೇ. ನನಗೂ ಈ ಗಂಟನ್ನ ಸರಿಯಾಗಿ ಬಿಡಿಸಲಾಗುತ್ತಿಲ್ಲ. ಆದರೆ ಜುಕಾವು ಹೇಳುವಂತೆ ನಮಗೆ ಕಾಣುತ್ತಿರುವುದೆಲ್ಲ ಸುಳ್ಳೆಂಬುದೇ ಸತ್ಯ."
"ಹಾಗಂದ್ರೆ?" ಮತ್ತೆ ಪ್ರಶ್ನಿಸಿದ ಮಜಗರ
" ನನ್ನನ್ನ ಕಾಡಬೇಡ, ಮುಂದಿನ ಹುಣ್ಣಿಮೆಗೆ ಜುಕಾವು ಸರಿಜಾದ್ಗಡದಲ್ಲಿ ಎಲ್ಲ ಮುನಿಶ್ರೇಷ್ಠರನ್ನ ಬರಹೇಳಿದ್ದಾರೆ. ನಮಗೂ ಆಹ್ವಾನವಿದೆ. ಅವರು ಅಲ್ಲಿ ಎಲ್ಲವನ್ನ ತಿಳಿಸುತ್ತಾರೆ, ಮತ್ತು ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಚರ್ಚೆ ಮಾಡುವುದೇ ಆ ಸಭೆಯ ಉದ್ದೇಶ. ನಿನ್ನನ್ನೂ ಕರೆದುಕೊಂಡು ಹೋಗುತ್ತೇನೆ. ನಿನ್ನ ಅನುಮಾನ ಗೊಂದಲ ಎಲ್ಲ ಅಲ್ಲಿ ಪರಿಹಾರವಾಗುತ್ತದೆ. ಅಲ್ಲಿಯವರೆಗೆ ಸಹನೆಯಿರಲಿ" ಸಮಾಧಾನದಲ್ಲಿ ಅರಿವಾಗುವಂತೆ ಹೇಳಿದ ಸುಪಿ.
ಮಜಗರ ಮೌನದಲೇ ಸಮ್ಮತಿಸಿದ.



No comments:

Post a Comment